
ಅಹಮದಾಬಾದ್ : ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಗುರುವಾರ ದುರಂತಕ್ಕೀಡಾಗಿ, ಮೃತರ ಸಂಖ್ಯೆ 274 ಕ್ಕೆ ಏರಿದೆ. ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ನಿಯಂತ್ರಣ ತಪ್ಪಿ, ಮೇಘನಿನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದೆ.
ವಿಮಾನದಲ್ಲಿ 230 ಪ್ರಯಾಣಿಕರು, 10 ಸಿಬ್ಬಂದಿಗಳು ಮತ್ತು 2 ಪೈಲಟ್ಗಳು ಸೇರಿದಂತೆ ಒಟ್ಟು 242 ಜನರಿದ್ದರು. ದುರಂತದಲ್ಲಿ ಅವರು ಸೇರಿದಂತೆ ಹಲವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಪೈಕಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಮಾತ್ರ ಬದುಕುಳಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಅವರು ಸಹ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ದೃಢವಾಗಿದೆ.
ಘಟನೆಯ ಸ್ಥಳವಾದ ವೈದ್ಯಕೀಯ ಕಾಲೇಜು ಹಾಸ್ಟೆಲ್ನಲ್ಲಿ ತಂಗಿದ್ದ 10 ವೈದ್ಯರು ಮತ್ತು ಅವರ ಸಂಬಂಧಿಕರು ಮೃತಪಟ್ಟಿದ್ದಾರೆ. ಜೊತೆಗೆ 24 ಮಂದಿ ಎಂಬಿಬಿಎಸ್ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಆಕಾಶ್ ಎಂಬ ಬಾಲಕನ ದಾರುಣ ಸಾವು:
ವಿಮಾನ ಅಪಘಾತದ ಸ್ಥಳದ ಸಮೀಪದಲ್ಲೇ ಚಹಾ ಅಂಗಡಿ ನಡೆಸುತ್ತಿದ್ದ ಸೀತಾಬೆನ್ ಅವರ 14 ವರ್ಷದ ಮಗ ಆಕಾಶ್, ಘಟನೆಯಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಮಧ್ಯಾಹ್ನದ ಹೊತ್ತಿನಲ್ಲಿ ಹಾಸ್ಟೆಲ್ ಕಟ್ಟಡದ ಬಳಿಯ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ಆಕಾಶ್ ಮೇಲೆ ವಿಮಾನದ ತುಣುಕೊಂದು ಬಿದ್ದು, ಶರೀರದ ಮೇಲೆ ಬೆಂಕಿ ಹೊತ್ತಿಕೊಂಡಿತ್ತು. ಟೀ ತಯಾರಿಸುತ್ತಿದ್ದ ತಾಯಿಯ ಕಣ್ಣೆದುರೆಯೇ ಮಗ ಶವವಾಗಿ ಬದಲಾಗಿದ್ದಾನೆ.