
ಉಡುಪಿ: ರಾಜ್ಯದಲ್ಲಿರುವ ಹಲವಾರು ಪರಿಶಿಷ್ಟ ಜಾತಿಯ ಸಮುದಾಯಗಳಲ್ಲಿ ಒಂದಾದ ‘ಆದಿ ದ್ರಾವಿಡ’ ಸಮುದಾಯದ ಬಗ್ಗೆ ತಕ್ಷಣವೇ ಸಮಗ್ರ ಕುಲಶಾಸ್ತ್ರೀಯ ಅಧ್ಯಯನ ನಡೆಸುವಂತೆ ಉಡುಪಿ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸುಧಾಕರ್ ದಾನಶಾಲೆ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಸಮುದಾಯದ ಜನರು ದೊಡ್ಡ ಪ್ರಮಾಣದಲ್ಲಿ ನೆಲೆಸಿದ್ದಾರೆ. ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಸಮುದಾಯದ ವ್ಯಾಪ್ತಿ ಹೆಚ್ಚಿದೆ. ಒಂದು ಅಂದಾಜಿನ ಪ್ರಕಾರ, ಈ ಸಮುದಾಯದ ಒಟ್ಟು ಜನಸಂಖ್ಯೆಯು 8,00,000 ಕ್ಕಿಂತಲೂ ಹೆಚ್ಚಿದೆ. ಆದಿ ದ್ರಾವಿಡ ಸಮುದಾಯದವರು ‘ಸತ್ಯ ಸಾರಾಮಾನಿ’ ದೈವವನ್ನು ತಮ್ಮ ಕುಲದೈವವಾಗಿ ಆರಾಧಿಸುತ್ತಾ ಬಂದಿದ್ದಾರೆ. ಇಂತಹ ಬೃಹತ್ ಸಮುದಾಯಕ್ಕೆ ಸರ್ಕಾರವು ತಕ್ಷಣ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಅಧಿಕೃತವಾಗಿ ಜಾತಿ ಪ್ರಮಾಣಪತ್ರಗಳನ್ನು ನೀಡಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಒಳಮೀಸಲಾತಿ ಲೋಪದೋಷಗಳ ವಿರುದ್ಧ ಆಕ್ರೋಶ: ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಒಳಮೀಸಲಾತಿಯಲ್ಲಿ ಅನೇಕ ಲೋಪದೋಷಗಳಿವೆ ಎಂದು ಸುಧಾಕರ್ ದಾನಶಾಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು “ಆದಿ ದ್ರಾವಿಡ ಎನ್ನುವುದು ಜಾತಿಯಲ್ಲ, ಅದು ಜಾತಿಗಳ ಗುಂಪು” ಎಂದು ನೀಡಿರುವ ಹೇಳಿಕೆಯು ಇಡೀ ಸಮುದಾಯಕ್ಕೆ ತೀವ್ರ ಬೇಸರವನ್ನುಂಟು ಮಾಡಿದೆ. ಈ ಹೇಳಿಕೆಯನ್ನು ಖಂಡಿಸಿರುವ ಅವರು, “ನಮ್ಮ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿಯ ಅಗತ್ಯವಿದೆ. ಈ ಸೌಲಭ್ಯ ದೊರೆತರೆ ಮಾತ್ರ ಸಮುದಾಯದ ಅನೇಕ ವಿದ್ಯಾವಂತ ಯುವಕರಿಗೆ ಸೂಕ್ತ ಉದ್ಯೋಗ ಮತ್ತು ಶೈಕ್ಷಣಿಕ ಅನುಕೂಲಗಳು ಲಭಿಸಲಿವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.




































