
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಜೈಲಿನಲ್ಲಿರುವ ನಟ ದರ್ಶನ್ (Darshan) ಅವರು ಕ್ವಾರೆಂಟೈನ್ ಸೆಲ್ನಲ್ಲಿ ದಿನ ದೂಡುತ್ತಿದ್ದಾರೆ. ಐಷಾರಾಮಿ ಜೀವನ ಸಾಗಿಸುತ್ತಿದ್ದ ‘ದಾಸ’ನಿಗೆ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳೊಂದಿಗೆ ಕಳೆಯುವ ಪರಿಸ್ಥಿತಿ ಬಂದಿದೆ.
ಈ ನಡುವೆ, ದೀಪಾವಳಿ ಹಬ್ಬದ ಪ್ರಯುಕ್ತ ದರ್ಶನ್ ಸೇರಿದಂತೆ ಜೈಲಿನಲ್ಲಿರುವ ಎಲ್ಲಾ ಕೈದಿಗಳಿಗೂ ಹಬ್ಬದ ವಿಶೇಷ ಊಟವನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ದರ್ಶನ್ಗೆ ನೀಡಿದ ಹಬ್ಬದ ವಿಶೇಷ ಭೋಜನ
ದೀಪಾವಳಿ ಹಬ್ಬದ ಪ್ರಯುಕ್ತ ಎಲ್ಲಾ ಕೈದಿಗಳಿಗೆ ಸಾಮಾನ್ಯ ಊಟದ ಬದಲಿಗೆ ಈ ವಿಶೇಷ ಭೋಜನವನ್ನು ವಿತರಿಸಲಾಯಿತು:
- ಮುದ್ದೆ
- ಚಪಾತಿ
- ಅನ್ನ
- ಸಾಂಬಾರ್
- ಮಜ್ಜಿಗೆ
- ಹಾಗೂ ವಿಶೇಷವಾಗಿ ಮೈಸೂರ್ ಪಾಕ್ ಸಿಹಿ ಹಂಚಲಾಗಿದೆ.
ದರ್ಶನ್ ಅವರು ಪ್ರತಿ ವರ್ಷವೂ ಕುಟುಂಬದ ಜತೆಯೇ ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಜೈಲಿನಲ್ಲಿ ಹಬ್ಬ ಕಳೆಯಬೇಕಾಗಿರುವುದು ಅವರಿಗೆ ಮತ್ತಷ್ಟು ಚಿಂತೆಗೀಡಾಗುವಂತೆ ಮಾಡಿದೆ ಎನ್ನಲಾಗಿದೆ. ಇತ್ತೀಚೆಗೆ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಜೈಲಿಗೆ ಭೇಟಿ ನೀಡಿ, ಅಲ್ಲಿನ ಕನಿಷ್ಠ ಸೌಲಭ್ಯದ ವ್ಯವಸ್ಥೆ ಸರಿಯಾಗಿದೆ ಎಂದು ವರದಿ ನೀಡಿರುವುದರಿಂದ, ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.




































