
ಉಡುಪಿ: ಮಣಿಪಾಲದ ಸರಳಬೆಟ್ಟುವಿನ ಸಂತೋಷ್ (ವಯಸ್ಸು 29) ಎಂಬಾತನನ್ನು 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕದ್ದುಕೊಂಡ ಪ್ರಕರಣದಲ್ಲಿ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 29ರಂದು ಸಂಜೆ 5:30ರ ಸುಮಾರಿಗೆ, ಕೆಎಂಸಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿರುವ ಮಹಿಳೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ , ಆರೋಪಿ ಸಂತೋಷ್ ಆಕೆಯನ್ನು ಹಿಂಬಾಲಿಸಿ, ಮಣಿಪಾಲದ WGSHA ಕಾಲೇಜು ಹಿಂಭಾಗದಲ್ಲಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣೆ ಪಿಐ ದೇವರಾಜ ಟಿವಿ ನೇತೃತ್ವದಲ್ಲಿ ಎಎಸ್ಐ ವಿವೇಕ್, ಹೆಡ್ ಕಾನ್ಸ್ಟೆಬಲ್ ಪ್ರಸನ್ನ, ಪಿಸಿ ಮಂಜುನಾಥ ಹಾಗೂ ಪಿಸಿ ರವಿರಾಜ್ ಒಳಗೊಂಡ ತಂಡ ಶ್ವಾನದಳದ ನೆರವಿನಿಂದ ತನಿಖೆ ಮುಂದುವರೆಸಿ, ಏಪ್ರಿಲ್ 3ರಂದು ಆರೋಪಿ ಸಂತೋಷ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪೊಲೀಸರು ಆರೋಪಿ ಬಳಿ ₹3.5 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.



































