
ಬೆಳ್ತಂಗಡಿ: ಮೇ 27ರಂದು ನಡೆದಿದ್ದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಪ್ರಮುಖ ಇಬ್ಬರು ಆರೋಪಿಗಳನ್ನು ಪೊಲೀಸರು ಜೂನ್ 2ರಂದು ಬೆಳ್ತಂಗಡಿಯ ನಾಲ್ಕು ಪ್ರಮುಖ ಸ್ಥಳಗಳಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಬಂಧಿತರಾದ ಬಂಟ್ವಾಳ ತಾಲೂಕಿನ ಮುಂಡರ ಕೋಡಿ ನಿವಾಸಿ ದೀಪಕ್ (21) ಹಾಗೂ ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27) ಎಂಬವರನ್ನು ಬಂಟ್ವಾಳ ಉಪವಿಭಾಗದ ಪೊಲೀಸ್ ಅಧಿಕಾರಿ ವಿಜಯ ಪ್ರಸಾದ್ ಅವರ ನೇತೃತ್ವದಲ್ಲಿ ಸ್ಥಳಗಳ ಪತ್ತೆ ಕಾರ್ಯಕ್ಕಾಗಿ ಬಿಗಿ ಭದ್ರತೆಯೊಂದಿಗೆ ಕರೆತರುವುದು ನಡೆದಿದ್ದು, ಗುರುವಾಯನಕೆರೆ ಅಂಗಡಿ, ಬೆಳ್ತಂಗಡಿ ಸಂತೆಕಟ್ಟೆ ಮೊಬೈಲ್ ಶಾಪ್, ಮೂರು ಮಾರ್ಗದ ಬಳಿ ಇರುವ ಚರಂಡಿ ಮತ್ತು ಉಜಿರೆಯ ನಿಡಿಗಲ್ ನದಿಯ ಬಳಿ ಸ್ಥಳ ಪರಿಶೀಲನೆ ನಡೆಸಲಾಯಿತು.
ಪೊಲೀಸ್ ತನಿಖೆಯ ಪ್ರಕಾರ, ಕೊಲೆ ಮಾಡಿದ ಬಳಿಕ ಆರೋಪಿಗಳು ಬೈಕ್ನಲ್ಲಿ ಬೆಳ್ತಂಗಡಿ ಕಡೆಗೆ ಪ್ರಯಾಣಿಸಿ, ಮಾರ್ಗಮಧ್ಯದಲ್ಲಿ ಹೊಸ ರೈನ್ಕೋಟ್ ಖರೀದಿಸಿ, ಮೊಬೈಲ್ ಶಾಪ್ನಲ್ಲಿ ಹೊಸ ಸಿಮ್ ಕಾರ್ಡ್ ಪಡೆದುಕೊಂಡು ನಂತರ ಆ ಸಿಮ್ ಅನ್ನು ಚರಂಡಿಗೆ ಎಸೆದು, ತಮ್ಮ ಮೊಬೈಲ್ ಫೋನ್ ಅನ್ನು ನಿಡಿಗಲ್ ನದಿಗೆ ಎಸೆದು, ಚಿಕ್ಕಮಗಳೂರು ಕಡೆಗೆ ಪರಾರಿಯಾದ ಕಾರಣ ಈ ಸ್ಥಳಗಳ ಮಹಜರು ಪ್ರಮುಖವಾಗಿತ್ತು.
ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸಿರುವ ಪೊಲೀಸರು, ಅವರ ನಡವಳಿಕೆ ಪತ್ತೆ ಹಚ್ಚಲು ಸ್ಥಳ ಮಹಜರು ಪ್ರಕ್ರಿಯೆ ಮುಂದುವರಿಸಿದ್ದಾರೆ.