
ಉಡುಪಿ: ಸಮಾಜಮುಖಿ ಸೇವಾ ಮನೋಭಾವ ಹಾಗೂ ದಾನ-ಧರ್ಮದಲ್ಲಿ ಮುಂಚೂಣಿಯಲ್ಲಿರುವ ನೀರೆ ರಾಮಕೃಷ್ಣ ವಾಗ್ಳೆ ಸಹೋದರರು, ಸಾರ್ವಜನಿಕರ ಪ್ರಯೋಜನಕ್ಕಾಗಿ ಬೈಲೂರು ಕೆಳಪೇಟೆಯಲ್ಲಿ ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಈ ತಂಗುದಾಣವನ್ನು ಶ್ರೀಮತಿ ಜಲಜ ಹಾಗೂ ಶ್ರೀ ಗೋವಿಂದ ವಾಗ್ಳೆ ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದ್ದು, ಸೆಪ್ಟೆಂಬರ್ 20 ರಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ.

ಗೋವಿಂದ ವಾಗ್ಳೆ – ಕಷ್ಟದಿಂದ ಸಮಾಜಮುಖಿ ಬದುಕಿಗೆ
ಯರ್ಲಪಾಡಿ ಗ್ರಾಮದ ಜಾರ್ಕಳದಲ್ಲಿ ಜನಿಸಿದ ಗೋವಿಂದ ವಾಗ್ಳೆಯವರು ತಮ್ಮ ಜೀವನದ ಆರಂಭದಲ್ಲಿ ಕೂಲಿ ಕೆಲಸ ಮಾಡಿ ಬದುಕನ್ನು ಸಾಗಿಸಿದ್ದರು. ನಂತರ ಜಲಜ ಅವರೊಂದಿಗೆ ವೈವಾಹಿಕ ಜೀವನ ಆರಂಭಿಸಿ, ಐದು ಮಂದಿ ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಬೆಳೆಸಿಕೊಂಡು ಮಾದರಿಯ ಕುಟುಂಬ ಜೀವನ ನಡೆಸಿದರು. ಸತ್ಯ, ಧರ್ಮ, ನಿಷ್ಠೆ ಹಾಗೂ ಪರೋಪಕಾರಿ ಗುಣಗಳಿಂದ ಜನಮನ ಗೆದ್ದ ಅವರು ಇಂದಿಗೂ ಜನಸ್ಮರಣೆಯಲ್ಲಿ ಜೀವಂತವಾಗಿದ್ದಾರೆ.
ಉದ್ಯಮದಲ್ಲಿ ಯಶಸ್ಸು – ಸಮಾಜಮುಖಿ ಸೇವೆಯಲ್ಲಿ ಮುಂಚೂಣೆ
ವಾಗ್ಳೆ ಕುಟುಂಬವು ತಂದೆ-ತಾಯಿಯ ಮಾರ್ಗದರ್ಶನ ಹಾಗೂ ಆಶೀರ್ವಾದದ ಆಧಾರದ ಮೇಲೆ ಆರ್.ಕೆ. ಟೈಲರ್ ಉದ್ಯಮವನ್ನು ಆರಂಭಿಸಿ ಯಶಸ್ಸನ್ನು ಕಂಡಿತು. ನಂತರ ಹೋಟೆಲ್ ಉದ್ಯಮದಲ್ಲೂ ಸಾಧನೆ ಮಾಡಿ, ಉಡುಪಿಯ ಹೃದಯಭಾಗದಲ್ಲಿ ಗೀತಾಂಜಲಿ ಸಿಲ್ಕ್ಸ್ ಸ್ಥಾಪಿಸಿ ನೂರಾರು ಕುಟುಂಬಗಳಿಗೆ ಉದ್ಯೋಗಾವಕಾಶ ಒದಗಿಸಿತು. ವ್ಯಾಪಾರದಲ್ಲಿ ಯಶಸ್ಸಿನೊಂದಿಗೆ ಸಮಾಜಮುಖಿ ಸೇವೆಯನ್ನೂ ಮುಂದುವರಿಸಿದ ಈ ಕುಟುಂಬವು ವಿದ್ಯಾದಾನ, ಅನ್ನದಾನ, ವಸ್ತ್ರದಾನಗಳ ಮೂಲಕ ಅನೇಕ ಕುಟುಂಬಗಳಿಗೆ ನೆರವಾಗುತ್ತಿದೆ.
ಸಮಾಜಮುಖಿ ಚಟುವಟಿಕೆಯಲ್ಲಿ ಸಂತೋಷ್ ವಾಗ್ಳೆ
ವಾಗ್ಳೆ ಕುಟುಂಬದ ಪರವಾಗಿ ಸಂತೋಷ್ ವಾಗ್ಳೆಯವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸಂಘ-ಸಂಸ್ಥೆಗಳ ಚಟುವಟಿಕೆಗಳಿಗೆ ಬೆಂಬಲ ನೀಡುತ್ತ, ದಾನ-ಧರ್ಮದಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ವಿಶ್ವಾಸಾರ್ಹ ವ್ಯಕ್ತಿತ್ವವನ್ನು ನಿರ್ಮಿಸಿಕೊಂಡಿದ್ದಾರೆ.
ಜನಾಭಿಪ್ರಾಯ
“ವಾಗ್ಳೆ ಕುಟುಂಬದ ಈ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ. ಇನ್ನಷ್ಟು ಜನರಿಗೆ ನೆರವು ಮತ್ತು ಉದ್ಯೋಗಾವಕಾಶ ಸಿಗಲಿ” ಎಂಬುದು ಸಾರ್ವಜನಿಕರ ಹಾರೈಕೆಯಾಗಿದೆ.



































