
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 88 ಪಾಕಿಸ್ಥಾನಿ ಪ್ರಜೆಗಳು ನೆಲೆಸಿದ್ದಾರೆ. ಇವರಲ್ಲಿ ಅಲ್ಪಾವಧಿ ವೀಸಾ ಹೊಂದಿರುವವರು ಮುಂದಿನ ಎರಡು ದಿನಗಳಲ್ಲಿ ಭಾರತ ತೊರೆಯಬೇಕಾಗಿದೆ. ಪಹಲ್ಗಾಮ್ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ನಿರ್ದೇಶನದಂತೆ ವಿದೇಶಾಂಗ ಸಚಿವಾಲಯ ನೀಡಿದ ಆದೇಶದಂತೆ ಕ್ರಮ ಜರುಗಿಸಲಾಗುತ್ತಿದೆ.
ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದು, ದೀರ್ಘಕಾಲಿಕ ವೀಸಾ ಹೊಂದಿರುವವರಿಗೆ ವಾಪಸಿನ ನಿಯಮ ಅನ್ವಯಿಸದು ಎಂದು ಸ್ಪಷ್ಟಪಡಿಸಿದರು. 88 ಪಾಕ್ ಪ್ರಜೆಯರಲ್ಲಿ ನಾಲ್ವರು ವೈದ್ಯಕೀಯ ಕಾರಣಕ್ಕಾಗಿ ಭಾರತಕ್ಕೆ ಆಗಮಿಸಿದ್ದಾಗಿ ತಿಳಿದುಬಂದಿದ್ದು, ಅವರಿಗೂ ನಾಲ್ಕು ದಿನಗಳಲ್ಲಿ ದೇಶ ತೊರೆಯುವಂತೆ ಸೂಚನೆ ನೀಡಲಾಗಿದೆ.
ಭಟ್ಕಳದಲ್ಲಿ 10 ಮಂದಿ ಮಹಿಳೆಯರು ಮತ್ತು ಅವರ ಮೂವರು ಮಕ್ಕಳು, ಹೊನ್ನಾವರದ ವಲ್ಕಿ ಹಾಗೂ ಕಾರವಾರದ ತೇಲಿರಾಂಜಿ ಗಲ್ಲಿಯಲ್ಲಿ ತಲಾ ಒಬ್ಬರು ನೆಲೆಸಿದ್ದಾರೆ. ಈ ಮಹಿಳೆಯರು ನವಾಯತ್ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಮಕ್ಕಳ ತಂದೆ ಭಾರತೀಯರು ಎಂಬ ಕಾರಣದಿಂದ ಅವರನ್ನು ವಾಪಸು ಕಳುಹಿಸುವ ಪ್ರಕ್ರಿಯೆಗೆ ಒಳಪಡುವುದಿಲ್ಲ.
ವಲ್ಕಿಯ ಯುವತಿಯನ್ನು ಪಾಕಿಸ್ಥಾನದಲ್ಲಿ ಮದುವೆ ಮಾಡಿ ತವರಿನಲ್ಲೇ ನೆಲೆಸಿಸಲಾಗಿದೆ. ಮತ್ತೊಬ್ಬರು ಪಾಕಿಸ್ಥಾನಿ ಪಾಸ್ಪೋರ್ಟ್ ಮೂಲಕ ಬಂದು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಒಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಜಾಮೀನು ದೊರೆತಿದೆ.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂರು ಪಾಕಿಸ್ಥಾನಿ ಮಹಿಳೆಯರು ವಾಸಿಸುತ್ತಿದ್ದಾರೆ. ಅವರು 12-13 ವರ್ಷಗಳ ಹಿಂದೆಯೇ ಮದುವೆಯಾಗಿ ನಗರಕ್ಕೆ ಬಂದು ನೆಲೆಸಿದ್ದಾರೆ. ಒಬ್ಬರು ವಾಮಂಜೂರು, ಮತ್ತೊಬ್ಬರು ಫಳ್ನೀರ್ನಲ್ಲಿ ವಾಸವಿದ್ದು, ಮತ್ತೊಬ್ಬರ ಬಗ್ಗೆ ಮಾಹಿತಿ ಶೀಘ್ರವೇ ಲಭಿಸಲಿದೆ.
ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದು, ಅವರು ದೀರ್ಘಕಾಲಿಕ ವೀಸಾ ಯೋಜನೆಯಡಿ ಭಾರತಕ್ಕೆ ಬಂದಿದ್ದು, ವಿದೇಶಾಂಗ ಸಚಿವಾಲಯದ ಮುಂದಿನ ನಿರ್ದೇಶನದ ಮೇಲೆ ಕ್ರಮ ಜರುಗಿಸಲಾಗುವುದು ಎಂದರು. ಜಿಲ್ಲೆಯ ಬೇರೆ ಯಾವುದೇ ಪ್ರದೇಶದಲ್ಲಿ ಪಾಕಿಸ್ಥಾನಿ ಪ್ರಜೆಗಳು ನೆಲೆಸಿಲ್ಲವೆಂದು ತಿಳಿಸಿದ್ದಾರೆ.