
ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮ – 12ನ್ನು 3 ನವೆಂಬರ್ 2025 ರಂದು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ವಾಗ್ಮಿಗಳಾದ ಎನ್.ಆರ್. ದಾಮೋದರ ಶರ್ಮರವರು ‘ಬೆಳಕಾಗಲಿ ಬಾಳು’ ಶೀರ್ಷಿಕೆಯಡಿಯಲ್ಲಿ ಪ್ರೇರಣೆಯ ಮಾತುಗಳನ್ನಾಡುತ್ತಾ, “ಜೀವನವನ್ನು ಬೆಳಗಿಸಬೇಕೆಂದರೆ ಆತ್ಮವಿಶ್ವಾಸ ಮತ್ತು ದೃಢ ನಿಶ್ಚಯ ಮುಖ್ಯ. ಪ್ರತಿದಿನ ಹೊಸದಾಗಿ ಕಲಿಯುವ ಮನಸ್ಸು ಬೆಳೆಸಿಕೊಳ್ಳಿ. ಜೀವನದಲ್ಲಿ ಸಣ್ಣ ಪ್ರಯತ್ನವೂ ದೊಡ್ಡ ಬದಲಾವಣೆಗೆ ಕಾರಣವಾಗಬಹುದು. ಕ್ಷಣಿಕ ಸಂತೋಷಕ್ಕೆ ಹಾತೊರೆಯುವ ಮನಸ್ಸನ್ನು ನಿಯಂತ್ರಿಸಿ, ಜೀವನವನ್ನು ಯಶಸ್ಸಿನ ದಡಕ್ಕೆ ಕರೆದೊಯ್ಯಬೇಕು. ಇತರರ ಮಾತಿಗೆ ಕಿವಿಯಾಗುವ ಮೊದಲು ಆತ್ಮದ ಮಾತನ್ನು ಆಲಿಸೋಣ. ತಾಯಿಯ ತ್ಯಾಗಕ್ಕೆ ಸಮನಾದ ತ್ಯಾಗ, ಪ್ರೀತಿ ಬೇರೊಂದಿಲ್ಲ. ತಂದೆಯ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಭಾರತದ ಜ್ಞಾನ ಪರಂಪರೆ ನಮಗೆ ಹೇಳಿರುವ ಉಪದೇಶಗಳನ್ನು ಅರಿತುಕೊಳ್ಳೋಣ. ಮಾತೃಭೂಮಿಯ ಬಗೆಗಿನ ಪ್ರೀತಿ ಗೌರವ ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತವೆ ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಹಾಗೂ ಅಶ್ವತ್ ಎಸ್.ಎಲ್ ರವರು ಗೌರವ ಉಪಸ್ಥಿತಿ ವಹಿಸಿದ್ದರು. ಬೋಧಕ-ಬೋಧಕೇತರ ವೃಂದದವರು , ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಂಸ್ಥೆಯ ವತಿಯಿಂದ ಎನ್. ಆರ್. ದಾಮೋದರ ಶರ್ಮ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಕೃತ ಉಪನ್ಯಾಸಕಿ ಡಾ. ಸೌಂದರ್ಯ ಲಕ್ಷ್ಮಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.




































